ಒಂದಾನೊಂದು ಕಾಲದಲ್ಲಿ ಅರುಣನೆಂಬ ಆಚಾರ್ಯ ಹಲವಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಾ ಗುರುಕುಲ ನಡೆಸುತ್ತಿದ್ದ. ತನ್ನ ಮಗನಿಗೆ ತಾನೇ ವೇದವಿದ್ಯೆಯನ್ನು ಕಲಿಸಿ, ಅವನನ್ನು ಪಾರಂಗತನನ್ನಾಗಿ ಮಾಡಿದ್ದ. ಒಂದು ದಿನ ಮಗ, ತಂದೆ ಅರುಣನನ್ನು ಉದ್ದೇಶಿಸಿ, "ತಂದೆ, ನಾನು ಇನ್ನೇನಾದರೂ ಕಲಿಯುವುದಿದೆಯೇ? ನನ್ನ ಕಲಿಕೆಯಲ್ಲೇನಾದರೂ ದೋಷವಿದೆಯೇ?", ಎಂದು ಕೇಳಲು ಅರುಣ, "ಮಗು ನಿನ್ನ ಅಧ್ಯಯನ ಪೂರ್ಣವಾಗಿದೆ. ಸಮಾವರ್ತನಾಗಿ ಗೃಹಸ್ಥಾಶ್ರಮವನ್ನು ಪ್ರವೇಶಿಸಿ ಕರ್ಮಾನುಷ್ಠಾನದಲ್ಲಿ ತೊಡಗು" ಎಂದು ಉಪದೇಶಿಸಿದ. ತಂದೆಯೇ ಗುರುವಾಗಿ ನೀಡಿದ ಉಪದೇಶವನ್ನು ಆದೇಶದಂತೆ ತಿಳಿದು, ಸುಕನ್ಯೆಯ ಪಾಣಿಗ್ರಹಣ ಮಾಡಿ ತನ್ನ ವರ್ಣಾಶ್ರಮಕ್ಕೆ ವಿಧಿಸಿದ ಕರ್ಮಾನುಷ್ಠಾನದಲ್ಲಿ (ಯಜನ - ಯಾಜನ, ಅಧ್ಯಯನ - ಅಧ್ಯಾಪನ, ದಾನ - ಪರಿಗ್ರಹ) ತೊಡಗಿಸಿಕೊಂಡನು. ತನ್ನ ಕುಟುಂಬವನ್ನು ಇನ್ನಷ್ಟು ಚೆನ್ನಾಗಿ ನಿರ್ವಹಿಸಬೇಕು ಮತ್ತು ಹೆಸರು-ಕೀರ್ತಿ ಗಳಿಸಿ ಗುರುಕುಲದ ವ್ಯಾಪ್ತಿಯನ್ನು ವಿಶಾಲಗೊಳಿಸಬೇಕೆಂದು ಚಿಂತಿಸುತ್ತಿದ್ದನು. ಅದಕ್ಕಾಗಿ ತಾನೂ ಹೆಚ್ಚಿನ ಶಾಸ್ತ್ರಾಧ್ಯಯನವನ್ನು ಮಾಡುತ್ತಾ, ಸುತ್ತಮುತ್ತಲಿನಲ್ಲಿ ನಡೆಯುವ ವಿದ್ವತ್ ಘೋಷ್ಠಿಗಳಲ್ಲಿ ಭಾಗವಹಿಸಿ ತನ್ನ ಸಾಮರ್ಥ್ಯವನ್ನು ಇಮ್ಮಡಿಗೊಳಿಸಿಕೊಳ್ಳುತ್ತಿದ್ದನು.
ಒಮ್ಮೆ ಪಾಂಚಾಲಪ್ರದೇಶದ ಧರ್ಮಿಷ್ಠನೂ, ವೇದಾಂತಿಯೂ ಆದ ರಾಜರ್ಷಿ ಪ್ರವಾಹಣ ಜೈವಾಲಿಯನ್ನು ಭೇಟಿಮಾಡುವ ಅವಕಾಶ ಒದಗಿತು. ರಾಜ ಈ ಯುವ ವಿದ್ವಾಂಸನಿಗೆ ಗೌರವಾದರಗಳನ್ನು ಒದಗಿಸಿ, ಯೋಗ್ಯ ಸ್ಥಾನವನ್ನು ನೀಡಿದನು. ರಾಜರ್ಷಿಯಾಗಿದ್ದ ಪ್ರವಾಹಣನಿಗೆ ಯುವಕನಲ್ಲಿರುವ ವಿದ್ಯಾಗರ್ವ ಕಾಣದಿರಲಿಲ್ಲ. ರಾಜ ಪಂಡಿತನನ್ನುದ್ದೇಶಿಸಿ, "ಪ್ರದೇಶದಿಂದ ಪ್ರದೇಶಕ್ಕೆ ಹೋಗಿ ವಿದ್ವತ್ತನ್ನು ಪ್ರದರ್ಶಿಸುತ್ತಿರುವ ನಿಮ್ಮ ವಿದ್ಯಾಭ್ಯಾಸ ಪೂರ್ಣವಾಗಿದೆಯೇ? ವಿದ್ವತ್ಸಭೆಯಲ್ಲಿ ಬರುವ ಪ್ರಶ್ನೆಗಳಿಗೆ ತಮ್ಮಲ್ಲಿ ಉತ್ತರವಿದೆಯೇ?", ಎಂದು ಕೇಳಿದಾಗ, "ನನ್ನ ಅಧ್ಯಯನ ಪೂರ್ಣವಾಗಿದೆ ಹಾಗೂ ನಿಮ್ಮ ಯಾವುದೇ ಪ್ರಶ್ನೆಗಾದರೂ ಉತ್ತರ ನನ್ನ ಬಳಿ ಇದೆ" ಎಂದು ದರ್ಪದಿಂದ ಹೇಳಿದನು. ಸರ್ವವಿದ್ಯೆಗಳೂ ತಿಳಿದಿರುವೆನೆಂಬ ಯುವವಿದ್ವಾಂಸನಲ್ಲಿರುವ ಮಿಥ್ಯಾ ಅಹಂಕಾರಕ್ಕೆ ಸರಿಯಾದ ಪೆಟ್ಟುಕೊಟ್ಟು, ಅವನನ್ನು ಅಧ್ಯಯನದ ಹಾದಿಗೆ ತರಬೇಕೆಂದು, "ನನ್ನಲ್ಲಿ ಐದು ಪ್ರಶ್ನೆಗಳಿವೆ. ಅದಕ್ಕೆ ಉತ್ತರವನ್ನು ನೀಡಿದರೆ ನನಗೆ ಸಂತೋಷವೂ ಆಗುತ್ತದೆ ಹಾಗೂ ನಿಮಗೆ ಪುರಸ್ಕಾರ ದೊರೆಯುತ್ತದೆ" ಎಂದನು. ಯುವ ವಿದ್ವಾಂಸ ತನ್ನ ಒಪ್ಪಿಗೆಯನ್ನು ನೀಡಿದ ಬಳಿಕ ರಾಜ ತನ್ನ ಐದು ಪ್ರಶ್ನೆಗಳನ್ನು ಮಂಡಿಸಿದನು -
1. ಜೀವಿಗಳು ಮರಣಾನಂತರ ತೆರಳುವುದು ಎಲ್ಲಿಗೆ?
2. ಜೀವಿಗಳು ಮರಣಾನಂತರ ತೆರಳುವ ಎರಡು ಮಾರ್ಗಗಳು ಯಾವುವು?
3. ಎಷ್ಟೊಂದು ಜೀವಿಗಳು ಸ್ವರ್ಗವನ್ನು ಪ್ರವೇಶಿಸುತ್ತಿದ್ದರೂ, ಸ್ವರ್ಗದಲ್ಲಿ ಇನ್ನೂ ಸ್ಥಳವಿರುವುದಾದರೂ ಹೇಗೆ?
4. ಮರಣಾನಂತರ ಜೀವಿ ಹೇಗೆ ಪುನರ್ಜನ್ಮವನ್ನು ಪಡೆಯುತ್ತದೆ?
5. ಜನನ-ಮರಣಚಕ್ರವನ್ನು ತಿಳಿಸುವ ಪಂಚಾಗ್ನಿ ವಿದ್ಯೆಯನ್ನು ವಿವರಿಸು?
ಐದು ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರ ತಿಳಿಯದ ಪಂಡಿತ, ನಾಚಿಕೆಯಿಂದ ತಲೆತಗ್ಗಿಸಿದ. ರಾಜ ಗೌರವ-ಮರ್ಯಾದೆಗಳನ್ನು ಮೀರದೇ ಯುವಕನಲ್ಲಿದ್ದ ಗರ್ವವನ್ನು ತೋರಿಸಿದ. ಸಂಕೋಚದಿಂದ ಸ್ವಗೃಹಕ್ಕೆ ತಿರುಗಿಬಂದು, ತಂದೆ ಅರುಣನಿಗೆ ನಡೆದ ಪ್ರಸಂಗವನ್ನೆಲ್ಲಾ ವಿವರಿಸಿ, ತನಗಾದ ಅವಮಾನವನ್ನು ಖೇದದಿಂದ ತಿಳಿಸಿದ ಹಾಗೂ ಪ್ರಶ್ನೆಗಳಿಗೆ ಉತ್ತರವನ್ನು ತಂದೆಯಲ್ಲಿ ಯಾಚಿಸಿದ. ಆ ಪ್ರಶ್ನೆಗಳಿಗೆ ಉತ್ತರಗಳು ತನಗೇ ತಿಳಿದಿಲ್ಲವಾಗಿ, ರಾಜನ ಬಳಿ ತೆರಳಿ ಕಲಿತುಕೊಂಡು ಬರುವುದಾಗಿ ಪಾಂಚಾಲರಾಜನ ಆಸ್ಥಾನಕ್ಕೆ ಅರುಣ ಹೊರಟ.
ರಾಜನು ಗುರುಕುಲನಡೆಸುತ್ತಿರುವ ಆಚಾರ್ಯನೋರ್ವ ಅತಿಥಿಯಾಗಿ ಬಂದಿರುವುದನ್ನು ತಿಳಿದು, ತಾನೇ ಮುತುವರ್ಜಿಯಿಂದ ಅತಿಥಿಸತ್ಕಾರವನ್ನು ನಡೆಸಿದ. ತದನಂತರ ಅರುಣನು ಪ್ರಶ್ನೆಗಳಿಗೆ ಉತ್ತರ ತಿಳಿಯದೆ, ವಿದ್ಯಾರ್ಥಿಯಾಗಿ ಬಂದಿರುವುದನ್ನು ತಿಳಿದು, "ನಾನು ಕ್ಷತ್ರಿಯ ಹಾಗೂ ತಾವು ಅಧ್ಯಾಪನ ಮಾಡಲು ಸಮರ್ಥರಾದ ಆಚಾರ್ಯರು. ಈ ಪ್ರಶ್ನೆಗಳಿಗೆ ಉತ್ತರ ನೀಡುವುದು ಸಮಂಜಸವಲ್ಲವಾದ್ದರಿಂದ ಅದರ ಬದಲಾಗಿ ನಿಮಗೆ ಹೇರಳವಾಗಿ ಧನ-ಕನಕ-ಗೋಸಂಪತ್ತುಗಳನ್ನು ನೀಡುವೆ. ಸ್ವೀಕರಿಸಿ, ಹರಸಿ, ತೆರಳುವವರಾಗಿ", ಎಂದು ಬಿನ್ನಹವನ್ನು ಅರುಣನ ಎದುರು ಮಂಡಿಸಿದ. ಅರುಣನು ತನಗೆ ಯಾವುದೇ ಅರ್ಥಕಾಮಗಳ ಆಸೆಯೂ ಇಲ್ಲ, ವಿದ್ಯಾದಾಹವೊಂದೇ ತನ್ನನ್ನು ತಲ್ಲಣವಾಗುವಂತೆ ಮಾಡಿದೆ ಹಾಗೂ ಜ್ಞಾನವೊಂದನ್ನು ಹೊರತು ಬೇರೇನೂ ಬೇಡವೆಂದು ತನ್ನ ದಿಟ್ಟನಿರ್ಧಾರವನ್ನು ತಿಳಿಸಿದ. ಅರುಣನಲ್ಲಿರುವ ಜಿಜ್ಞಾಸೆಯನ್ನು ಕಂಡ ರಾಜನು ಸಂತೋಷಗೊಂಡು, ಆಸ್ಥಾನದಲ್ಲೇ ಕೆಲವು ದಿನಗಳು ತಂಗಬೇಕು ಹಾಗೂ ಆ ಕಾಲದಲ್ಲಿ ಕೆಲವು ಪೂರ್ವಭಾವಿ ಉಪಾಸನಾಭ್ಯಾಸಗಳನ್ನು ಮಾಡಬೇಕೆಂದು ತಿಳಿಸಿದ.
ಅರುಣ ಪ್ರವಾಹಣರಾಜನ ಮಾತಿಗೆ ಸಮ್ಮತಿಸಿ, ತನ್ನ ಪ್ರಶ್ನೆಗಳಿಗೆ ಉತ್ತರ ದೊರೆಯುವ ದಿನಕ್ಕೆ ಎದುರುನೋಡುತ್ತಾ ತನ್ನ ಸಾಧನೆಯಲ್ಲಿ ಮಗ್ನನಾದ.
ಸುದಿನದಂದು ಪ್ರವಾಹಣರಾಜ ಅರುಣನನ್ನು ಉದ್ದೇಶಿಸಿ, "ಐದು ಪ್ರಶ್ನೆಗಳಿಗೆ ಉತ್ತರವಿರುವುದು ಪಂಚಾಗ್ನಿವಿದ್ಯೆಯಲ್ಲಿ ಹಾಗು ಈ ವಿದ್ಯೆ ಅನಾದಿಕಾಲದಿಂದಲೂ ಕ್ಷತ್ರಿಯರ ಬಳಿ ಮಾತ್ರ ಇರುವುದರಿಂದ ನಿನಗೆ ತಿಳಿದಿಲ್ಲವಾಗಿದೆ. ಇಂದು ನಾನು ನಿನಗೆ ಇದನ್ನು ಉಪದೇಶಿಸುವೆ. ನೀನಿದನ್ನು ಜಗತ್ತಿಗೆ ಹರಡಬಹುದು" ಎಂದು ತಿಳಿಸಿ ಪಂಚಾಗ್ನಿವಿದ್ಯೆಯನ್ನು ವಿವರಿಸಿದನು. ಜ್ಞಾನದಾಹವನ್ನು ತೀರಿಸಿದ ರಾಜನಿಗೆ ನಮಸ್ಕರಿಸಿ, ಅರುಣ ಸಂತೃಪ್ತಿಯಿಂದ ತನ್ನ ಗುರುಕುಲಕ್ಕೆ ತೆರಳಿದನು.
ಪಂಚಾಗ್ನಿ ವಿದ್ಯೆಯ ಸಾರಾಂಶ ಹಾಗೂ ಪ್ರಶ್ನೆಗಳಿಗೆ ಉತ್ತರ
ಜೀವಿಯು ತನ್ನ ಕರ್ಮಾನುಸಾರವಾಗಿ ಮರಣಾನಂತರ ಊರ್ಧ್ವಲೋಕ, ಅಧೋಲೋಕ ಅಥವಾ ಮನುಷ್ಯಲೋಕಗಳಿಗೆ ಶುಕ್ಲಗತಿ ಅಥವಾ ಕೃಷ್ಣಗತಿಗಳೆಂಬ ಮಾರ್ಗಗಳಿಂದ ತಲುಪುತ್ತಾನೆ. ಸ್ವರ್ಗದ ಭೋಗವನ್ನು ಅನುಭವಿಸಿ,
ಪುಣ್ಯಕ್ಷಯವಾದನಂತರ ಪುನಃ ಮರ್ತ್ಯಲೋಕವನ್ನು ಪ್ರವೇಶಿಸುವುದರಿಂದ ಅನಿತ್ಯವಾದ ಸ್ವರ್ಗಲೋಕ ತುಂಬಿತುಳುಕುತ್ತಿಲ್ಲ. ಕರ್ಮಾನುಸಾರವಾಗಿ ತೆರಳುವ ಜೀವ ಜ್ಯೋತಿರೂಪವನ್ನು ಹೊಂದಿ, ಮೋಡವನ್ನು ಪ್ರವೇಶಿಸಿ, ಮಳೆಯಾಗಿ, ವನಸ್ಪತಿಯಲ್ಲಿ ಒಂದಾಗಿ, ಶುಕ್ರಶೋಣಿತವಾಗಿ ಸ್ತ್ರೀಪುರುಷರ ಸಂಭೋಗದಿಂದ ಆಯಾ ಲೋಕಗಳಲ್ಲಿ ಜನನ ಹೊಂದುತ್ತದೆ.
(ಛಾಂದೋಗ್ಯ ಉಪನಿಷತ್)
ಈ ಕಥೆಯಿಂದ ಕಲಿಯಬಹುದಾದ ಕೆಲವು ಅಂಶಗಳು
★ ವಿದ್ಯೆಯಿರುವುದು ಅಧ್ಯಯನಕ್ಕೆ ಹಾಗೂ ಜ್ಞಾನದಾಹವನ್ನು ನೀಗಿಸಲೇ ಹೊರತು ಪ್ರದರ್ಶನಕ್ಕಲ್ಲ
★ ರಾಜನೇ ಆದರು ಆಚಾರ್ಯರಿಗೆ ನೀಡಿದ ಅತಿಥಿಸತ್ಕಾರ ಅನುಕರಣೀಯ
★ ಅರುಣ ತನಗೆ ತಿಳಿಯದ ವಿಷಯದ ಬಗ್ಗೆ ಯಾವುದೇ ಹಿಂಜರಿಕೆಯಿಲ್ಲದೆ ಒಪ್ಪಿಕೊಂಡಿದ್ದು (Intellectual Honesty) ಮೇಲ್ಪಂಕ್ತಿಯ ಆದರ್ಶ
★ ಕಲಿಯಲು ವಯಸ್ಸಾಗಲೀ, ಪರಿಸ್ಥಿತಿಯಾಗಲೀ ಅಡ್ಡಿಯಾಗದೇ, ನಮಗಿಂತ ತಿಳಿದವರಾರೇ ಆದರೂ, ಅವರಿಂದ ವಿದ್ಯೆಯನ್ನು ಬೇಡಬೇಕು
★ ಜ್ಞಾನಮಾರ್ಗದಲ್ಲಿರುವವರಿಗೆ ಇರಬೇಕಾದ ನಿತ್ಯಾನಿತ್ಯ ವಿವೇಕ ಮತ್ತು ಪ್ರಾಪಂಚಿಕ ವಿಷಯಗಳ ಬಗ್ಗೆ ವೈರಾಗ್ಯ ಅವಶ್ಯಕ
★ ಮರಣಾನಂತರ ನಮ್ಮೊಂದಿಗೆ ಕರ್ಮಫಲಗಳು ಮಾತ್ರ ಬರುವುದರಿಂದ, ನಮ್ಮ ಜೀವನದಲ್ಲಿ ಸತ್ಕರ್ಮವನ್ನೇ ಹೆಚ್ಚಾಗಿ ಮಾಡುವುದು
★ ಸ್ವರ್ಗಾದಿಲೋಕಗಳೂ ಅನಿತ್ಯವಾದ್ದರಿಂದ, ನಿತ್ಯವಾದ ಆತ್ಮವನ್ನು ತಿಳಿದು, ಇಲ್ಲೇ ಜೀವನ್ಮುಕ್ತರಾಗಿ ಲೋಕಸಂಗ್ರಹದಲ್ಲಿ ತೊಡಗುವುದು.
ಬಹಳ ಧನ್ಯವಾದಗಳು ಗುರುಗಳೆ, ಮತ್ತು ಈ bolg spot ಓದಿ ಸಂತೋಷವಾಗಿದೆ.
ReplyDeleteThank you very much 🙏 Keep learning and continue to support us
Deleteಕಥೆ ತುಂಬ ಇಷ್ಟ ಆಯಿತು. ಧನ್ಯವಾದ
ReplyDeleteThank you very much 🙏 Keep learning and continue to support us..
Deleteಕಥೆ ಹಾಗೂ ಅದರ ಮೂಲಕ ನೀಡಿರುವ ಸಂದೇಶ ಬಹಳ ಚೆನ್ನಾಗಿದೆ.
ReplyDeleteThank you very much 🙏 Keep learning and continue to support us..
DeleteKarma and karma pala yeshtu mukya waghutade antha thombha saralawagi arthamadisiruva nimage vandanegalu.
ReplyDeleteThank you very much 🙏 Happy to see your learning.. Continue your adhyanana and keep supporting us..
Delete