🔍 Search This Blog

🌍 Translate

ವೇದಾಂತ ಪರಿಚಯ - ಭಾಗ 1 - ಪುರುಷಾರ್ಥಗಳು

ಮಾನವ ಜನ್ಮದ ವೈಶಿಷ್ಟ್ಯತೆಯನ್ನು ತಿಳಿಸುವುದರೊಂದಿಗೆ, ಪ್ರಾಣಿಗಳ ಜೊತೆಗಿನ ಸಾಧರ್ಮ್ಯತೆ ಹಾಗು ವೈಧರ್ಮ್ಯತೆಯನ್ನು ತೋರಿಸುವ ಸಂಸ್ಕೃತ ಸುಭಾಷಿತ ಹೀಗಿದೆ:

ಆಹಾರ ನಿದ್ರಾ ಭಯ ಮೈಥುನಂ ಚ ಸಮಾನ್ಯಮೇತತ್ಪಶುಭಿರ್ನರಾಣಾಮ್ ।
ಬುದ್ಧಿರ್ಹಿ ತೇಷಾಮಧಿಕೋ ವಿಶೇಷೋ ಬುದ್ಧ್ಯಾ ವಿಹೀನಾಃ ಪಶುಭಿಃ ಸಮಾನಃ ||


ಸಾಧರ್ಮ್ಯತೆ (ಸಾಮಾನ್ಯ ಅಂಶಗಳು):
1. ಜೀವನ ನಿರ್ವಹಣೆಯ ಸಲುವಾಗಿ ಆಹಾರ ಸೇವನೆ
2. ಶಾರೀರಿಕ ಹಾಗು ಮಾನಸಿಕ ವಿಶ್ರಾಂತಿಯ ಸಲುವಾಗಿ ನಿದ್ರೆ
3. ಉಳಿವು-ಅಳಿವಿಗೆ ಚ್ಯುತಿ ಬಂದಾಗ, ಅನಿರೀಕ್ಷಿತ/ಹಠಾತ್ ಪ್ರಚೋದನೆಗಳಾದಾಗ,‌ ಆಘಾತಕಾರಿ ಘಟನೆಗಳು ಸಂಭವಿಸಿದಾಗ, ಇನ್ನಿತರೆ ಸಂದರ್ಭಗಳಲ್ಲಿ ಭಯ ಪಡುವುದು.
4. ತಮ್ಮೊಳಗಿರುವ ನೈಸರ್ಗಿಕ ವಿಕಸನೀಯ ಚಾಲನೆಗಳ (natural evolutionary drive) ಅಥವಾ ಸಂತಾನ ಮುಂದುವರೆಸುವ ಕಾರಣದಿಂದ ಸಂಭೋಗ (ಮೈಥುನ) ಮಾಡುವುದು.

ವೈಧರ್ಮ್ಯತೆ - ಮಾನವರನ್ನು ಎಲ್ಲಾ ಪಶುಪಕ್ಷಿಗಳಿಗಿಂತ ಉನ್ನತ ಮತ್ತು ಅಸಾಮಾನ್ಯ ಮಾಡುವ ಮುಖ್ಯವಾದ ಅಂಶವೆಂದರೆ ತೀಕ್ಷ್ಣ ಬುದ್ಧಿಶಕ್ತಿ.
ತೀಕ್ಷ್ಣ ಬುದ್ಧಿಶಕ್ತಿ ಪ್ರಾಣಿಗಳಲ್ಲಿ ಬುದ್ಧಿಶಕ್ತಿಯು ಇರುವುದಾದರೂ, ಅದು ನಿಯಮಿತವಾಗಿದ್ದು, ಪ್ರಾಣಿಗಳು ಅದನ್ನು ಬಹುಶಃ ಪೂರ್ವ ನಿಯೋಜಿತ (programmed) ರೀತಿಯಲ್ಲಿ ಮತ್ತು ಸಹಜ ಪ್ರವೃತ್ತಿಯಂತೆ (instinctive) ಉಪಯೋಗಿಸುತ್ತವೆ. ತದ್ವ್ಯತಿರಿಕ್ತವಾಗಿ ಮಾನವನ ಬುದ್ಧಿಶಕ್ತಿಯು ಅತಿತೀಕ್ಷ್ಣವಾಗಿಯೂ, ಅತ್ಯುನ್ನತವಾಗಿಯೂ ಇದ್ದು, ಅದು ಸಂದರ್ಭೋಚಿತ ತಿಳುವಳಿಕೆ (contextual understanding), ವಿಮರ್ಶಾತ್ಮಕ ಚಿಂತನೆ (critical thinking), ಸಮಸ್ಯೆ ಪರಿಹಾರ (problem solving), ಸೃಜನಶೀಲತೆ (creativity), ಭಾವನಾತ್ಮಕ ನಿರ್ವಹಣೆ (emotional management), ವಿವೇಕ (discrimination) ಮುಂತಾದ ಆಯಾಮಗಳಲ್ಲಿ ವ್ಯಕ್ತವಾಗುತ್ತದೆ. 

ಪುರುಷಾರ್ಥಗಳು:
ಮಾನವನು ವಿವೇಕಯುಕ್ತ ಬುದ್ಧಿಶಕ್ತಿಯೊಂದಿಗೆ, ಇಚ್ಛಾಶಕ್ತಿ ಹಾಗು ಕ್ರಿಯಾಶಕ್ತಿಯನ್ನು ಉಪಯೋಗಿಸಿಕೊಂಡು, ಜೀವನದ ಪ್ರತಿಯೊಂದು ಹಂತದಲ್ಲಿಯೂ ಒಂದಾದರೊಂದು ಗುರಿಯನ್ನು ಸಾಧಿಸಲು ಪ್ರಯತ್ನಿಸುತ್ತಾನೆ. ಇದನ್ನೇ ಪುರುಷಾರ್ಥ ಎಂದು ಕರೆಯುತ್ತಾರೆ. ಇಲ್ಲಿ ’ಪುರುಷ’  ಎಂಬ ಪದವು, ಗಂಡಸರಿಗಷ್ಟೇ ಅನ್ವಯವಾಗುವುದೆಂದು ತಪ್ಪು ತಿಳಿಯದೆ,  ಸಮಸ್ತ ಮಾನವ ಜೀವರಾಶಿಗಳಿಗೆಂದು ಅರ್ಥೈಸಬೇಕು. ಹೀಗಾಗಿ ಪುರುಷಾರ್ಥವೆಂದರೆ "ಸಮಸ್ತ ಮಾನವರು ಸಾಧಿಸಲು ಬಯಸುವ ಗುರಿಗಳು" ಎಂದು ಅರ್ಥ ('ಸರ್ವೈಃ ಮನುಷ್ಯೈಃ ಪ್ರಾರ್ಥ್ಯತೇ ಇತಿ  ಪುರುಷಾರ್ಥಃ').

ಜಗತ್ತಿನ ಮಾನವರೆಲ್ಲರ ಗುರಿಗಳು ವಿಭಿನ್ನ ಹಾಗು ಅಸಂಖ್ಯವಾಗಿವೆ. ಇನ್ನು ಪ್ರತಿಯೊಬ್ಬನೂ, ತನ್ನ ಜೀವನದ ಪ್ರತಿಯೊಂದು ಹಂತದಲ್ಲಿಯೂ ಒಂದಾದರೊಂದು ಗುರಿಯನ್ನು ಇಟ್ಟುಕೊಳ್ಳುವುದು ಸಾಮಾನ್ಯ‌. ಇದು ಹೇಗೆಂದರೆ ಬಾಲ್ಯದಲ್ಲಿ ಆಟಿಕೆಗಳಿಂದ ಮೊದಲುಮಾಡಿ, ನಂತರ ಸ್ನೇಹಿತರು,  ವಿದ್ಯಾಭ್ಯಾಸ, ಕೆಲಸ, ಮಡದಿ, ಮಕ್ಕಳು, ಮನೆ, ಕಾರು, ಆರೋಗ್ಯ... ಹೀಗೆ ಮಾನವನ ಅನ್ವೇಷಣೆಗೆ ಕೊನೆಯೆಲ್ಲಿ?!   ವೇದವು ಈ ಎಲ್ಲಾ ಗುರಿಗಳನ್ನು ಕ್ರೋಢೀಕರಿಸಿ, ಅವುಗಳನ್ನು ಮೂಲಭೂತ ನಾಲ್ಕು(4) ಪುರುಷಾರ್ಥಗಳನ್ನಾಗಿ (Fundamental goals of humanity) ವಿಂಗಡಿಸಿದೆ. ಅವೇ ಅರ್ಥ, ಕಾಮ, ಧರ್ಮ ಮತ್ತು ಮೋಕ್ಷ.

ಅರ್ಥ ಪುರುಷಾರ್ಥ: ಮಾನವನು ಗಳಿಸುವ ಮತ್ತು ಗಳಿಸಲೆತ್ನಿಸುವ ಎಲ್ಲಾ ರೀತಿಯ ಚರ ಹಾಗು ಅಚರಾತ್ಮಕ ಸಂಪತ್ತು. ಅರ್ಥ ಪುರುಷಾರ್ಥವನ್ನು ಮಾನವನು ಹಸಿವು, ನೋವು, ಅನಾರೋಗ್ಯ, ದುಃಖ  ಇತ್ಯಾದಿಗಳಿಂದ ಉಂಟಾಗುವ ಅಸುರಕ್ಷತೆಯಿಂದ ತಪ್ಪಿಸಿಕೊಳ್ಳಲು ಉಪಯೊಗಿಸುತ್ತಾನೆ. ಅರ್ಥವೆಂದರೆ ಧನ ಸಂಪಾದನೆಯಷ್ಟೇ ಅಲ್ಲದೆ ವಿದ್ಯೆ, ಚಿನ್ನ, ವಾಹನ, ಮನೆ, ಕೀರ್ತಿ ಇತ್ಯಾದಿಗಳನ್ನು ಗಳಿಸುವುದೂ ಆಗಿದೆ.

ಕಾಮ ಪುರುಷಾರ್ಥ: ಮಾನವನು ಜೀವನದಲ್ಲಿ ಸುಖಪ್ರಾಪ್ತಿಗಾಗಿ ಬಯಸುವ ಆಸೆಗಳು, ಕಾಮನೆಗಳೇ ಕಾಮ ಪುರುಷಾರ್ಥ. ಜೀವನದ ಮೂಲಭೂತ ಸೌಕರ್ಯಗಳ ಪ್ರಾಪ್ತಿಯ ನಂತರ ಮಾನವನು ಸುಖ, ಸಂತೋಷ ಪ್ರಾಪ್ತಿಗೆ (pleasure ಕಾಮ ಪುರುಷಾರ್ಥದ ಬೆನ್ನುಹತ್ತಿ ಹೋಗುತ್ತಾನೆ. ಸಂಬಂಧಗಳನ್ನು ಬೆಳೆಸುವುದು, ದೂರದರ್ಶನ ವೀಕ್ಷಿಸುವುದು, ಸಾಮಾಜಿಕ ಜಾಲತಾಣದಲ್ಲಿ ಸಮಯ ಕಳೆಯುವುದು, ಹವ್ಯಾಸಗಳಲ್ಲಿ ತೊಡಗುವುದು, ವಿಹಾರಕ್ಕೆ ಹೋಗುವುದು ಇತ್ಯಾದಿಗಳೆಲ್ಲವೂ ಕಾಮ ಪುರುಷಾರ್ಥವೇ. ಕೆಲವು ಕಾಮನೆಗಳನ್ನು ಸಿದ್ಧಿಸಿಕೊಳ್ಳಲು ಅರ್ಥವು ಅವಶ್ಯಕವಾಗುತ್ತದೆ.

ಧರ್ಮ ಪುರುಷಾರ್ಥ: 'ಧರ್ಮ' ಎಂಬ ಪದಕ್ಕೆ ಹಲವಾರು ವ್ಯಾಖ್ಯಾನಗಳಿದ್ದರೂ, ಸಂದರ್ಭೋಚಿತವಾಗಿ, ಪುರುಷಾರ್ಥ ವಿಷಯದ ಹಿನ್ನಲೆಯಲ್ಲಿ ಅದನ್ನು ’ಪುಣ್ಯ’ ಎಂದು ಕರೆಯುತ್ತಾರೆ. ಇದಕ್ಕೆ ಬುನಾದಿಯು ವೈದಿಕ ಸಂಸ್ಕೃತಿಯ ಪ್ರಮುಖ ವಿಷಯಗಳಾದ ಕರ್ಮಸಿದ್ಧಾಂತ ಹಾಗು ಪುನರ್ಜನ್ಮ. ಈ ವಿಷಯಗಳು  ಇಂದ್ರಿಯ ಅಗೋಚರವಾಗಿದ್ದು, ಶ್ರದ್ಧಾವಿಷಯವಾದ ಕಾರಣ ಪುಣ್ಯವನ್ನು ’ಅದೃಷ್ಟ’ ವೆಂದು ಕರೆಯುತ್ತಾರೆ. ಮಾನವನು ಗಳಿಸುವ ಎಲ್ಲಾ ರೀತಿಯ ಸಂಪತ್ತು ಹಾಗು ಸಂಬಂಧಗಳು ಅಶಾಶ್ವತವೆಂಬುದೆಂದು ತಿಳಿದಿರುವ ವಿಷಯವೇ. ಜೀವಿಯ ಮರಣಾನಂತರ ಕೇವಲ ಕರ್ಮರಾಶಿಯಷ್ಟೇ ಜೀವಾತ್ಮದೊಡನೆ ಇತರ ಲೋಕಗಳಿಗೆ ಅಥವಾ ಮುಂದಿನ ಜನ್ಮಕ್ಕೆ ಸಾಗುತ್ತದೆ. ಕರ್ಮರಾಶಿಯೆಂದರೆ ಅನಾದಿ ಜನ್ಮಗಳಿಂದ ಜೀವ ಸಂಪಾದಿಸಿರುವ ಪುಣ್ಯ-ಪಾಪಗಳ ರಾಶಿ. ಮಾನವನು ವರ್ತಮಾನದಲ್ಲಿ ಕಾಯಾ-ವಾಚಾ-ಮನಸಾ ಮಾಡುವ ಸತ್ಕರ್ಮ, ಸಚ್ಚಿಂತನೆಗಳಿಗೆ  ಪುಣ್ಯಫಲವು ದೊರಕುತ್ತದೆ. ಅದು ಜೀವಿಗೆ ಭವಿಷ್ಯದಲ್ಲಿ (ಈ ಜನ್ಮ ಅಥವಾ ಯಾವುದೇ ಮುಂದಿನ ಜನ್ಮದಲ್ಲಿ) ಸದೃಢ ದೇಹೇಂದ್ರಿಯಗಳನ್ನು (ಭೋಗ ಸಾಧನ), ಸುಖಪ್ರದವಾದ ವಿಷಯವಸ್ತುಗಳನ್ನು (ಭೋಗ ವಸ್ತು) ಮತ್ತು ಸುಖಕರವಾದ ಸನ್ನಿವೇಶ ಅಥವಾ ಸ್ವರ್ಗಾದಿ ಊರ್ಧ್ವ ಲೋಕವನ್ನು (ಭೋಗ ಲೋಕ)  ನೀಡುವಲ್ಲಿ ಕಾರಣವಾಗುತ್ತದೆ. ಹಾಗೆಯೇ ಮಾನವನು ಕಾಯಾ-ವಾಚಾ-ಮನಸಾ ಮಾಡುವ  ದುಷ್ಕರ್ಮ, ದುಶ್ಚಿಂತನೆಗಳಿಗೆ ಪಾಪಫಲವು ಗಳಿಕೆಯಾಗುತ್ತದೆ. ಅದು ಜೀವಿಗೆ ಭವಿಷ್ಯದಲ್ಲಿ ದೋಷಸಹಿತ ದೇಹೇಂದ್ರಿಯಗಳನ್ನು, ದುಃಖಪ್ರದವಾದ ವಿಷಯವಸ್ತುಗಳನ್ನು ಮತ್ತು ದುಃಖಕರವಾದ ಸನ್ನಿವೇಶ ಅಥವ ನರಕಾದಿ ಅಧೋಲೋಕವನ್ನು ನೀಡುವಲ್ಲಿ ಕಾರಣವಾಗುತ್ತದೆ.  ಹೀಗಾಗಿ ಧರ್ಮಾರ್ಜನೆಗೆ ಪ್ರಾಮುಖ್ಯತೆ ಕೊಡುವ ಸುಸಂಸ್ಕೃತನು ಪುಣ್ಯಪ್ರಧಾನ ಜೀವನ ನಡೆಸಲು ಪ್ರಯತ್ನಿಸುತ್ತಾನೆ. 

ಈ ಮೂರು ಪುರುಷಾರ್ಥಗಳಲ್ಲಿನ ಸ್ವಾಭಾವಿಕ ದೋಷಗಳು:
ಜಗತ್ತಿನ ಬಹುಶಃ ಎಲ್ಲಾ ಮಾನವರು ತಮ್ಮ ಸಂಪೂರ್ಣ ಜೀವನವನ್ನು ಈ ಮೂರು ಪುರುಷಾರ್ಥಗಳ ಗಳಿಕೆಗಾಗಿ ವ್ಯಯಿಸುತ್ತಾರೆ. ಆದರೆ ವಿರಳವಾದ ವಿವೇಕಿಗಳು, ತಮ್ಮ ಅಥವಾ ಇತರರ ಜೀವನದ ಅನುಭವಗಳ ವಿಶ್ಲೇಷಣೆ ಮಾಡಿ, ಈ ಪುರುಷಾರ್ಥಗಳಲ್ಲಿನ ಪ್ರಮುಖ ಮೂರು (3) ಸ್ವಾಭಾವಿಕ ದೋಷಗಳನ್ನು ಕಾಣುತ್ತಾರೆ. ಅವೆಂದರೆ

1. ದುಃಖಮಿಶ್ರಿತತ್ವಂ - ಈ ಮೂರು ಪುರುಷಾರ್ಥಗಳ ಉದ್ದೇಶ ದುಃಖನಿವೃತ್ತಿ ಹಾಗು ಸುಖಪ್ರಾಪ್ತಿ. ಆದರೆ ಅವನ್ನು ಗಳಿಸಲು ಪಡಬೇಕಾದ ದೈಹಿಕ ಮತ್ತು ಮಾನಸಿಕ ಶ್ರಮ, ಸಂರಕ್ಷಿಸಿಕೊಳ್ಳಲು ಪಡಬೇಕಾದ ಕಷ್ಟ ಹಾಗು ಗಳಿಸಿದ ವಸ್ತು ದೂರವಾದಾಗ ಆಗುವ ನೋವು ಸಾರ್ವತ್ರಿಕ ಅನುಭವವಾಗಿದೆ. ಈ ಸಂದರ್ಭಗಳಲ್ಲಿ ವಿವಿಧ ರೀತಿಯ ಸಂಪತ್ತಿನ ವ್ಯಯ ಹಾಗು ಆರೋಗ್ಯ ಹಾನಿಯಿಂದ ಜನರು ದುಃಖ ಪಡುವುದು ಕೂಡ ಸರ್ವೇ ಸಾಮಾನ್ಯ. ಹೀಗಾಗಿ ಪುರುಷಾರ್ಥ ಪ್ರಾಪ್ತಿಯ ಆನಂದದ ಜೊತೆಯಲ್ಲಿ ದುಃಖವೂ ಸದಾ ಸೇರಿರುವುದು, ಗಿಡದಲ್ಲಿರುವ  ಗುಲಾಬಿಯೊಂದಿಗಿನ ಮುಳ್ಳುಗಳ ಹಾಗೆ!

2. ಅತೃಪ್ತಿಕರತ್ವಂ - ಪುರುಷಾರ್ಥ ಪ್ರಾಪ್ತಿಯ ನಂತರ ಮಾನವನು ಮನಸ್ಸಿನಲ್ಲಿ ಪರಿಮಿತವಾದ ಆನಂದಪ್ರಾಪ್ತಿ ಅಥವಾ ದುಃಖನಿವೃತ್ತಿಯನ್ನು ಅನುಭವಿಸುತ್ತಾನೆ. ಆದರೆ ಮನಸ್ಸು ಅಷ್ಟಕ್ಕೇ ತೃಪ್ತಿಪಡದೆ ಪ್ರಾಪ್ತಿಯಾದ ವಿಷಯ ವಸ್ತುವನ್ನು ಇನ್ನಷ್ಟು, ಮತ್ತಷ್ಟು ಅನುಭವಿಸಲು ಹಂಬಲಿಸುತ್ತದೆ. ಇಲ್ಲವೇ ಅದರಿಂದ ವಿಮುಖವಾಗಿ ಮತ್ತೊಂದು ವಿಷಯವಸ್ತುವನ್ನು ಪಡೆಯುವ ಇಚ್ಛೆ ವ್ಯಕ್ತಪಡಿಸುತ್ತದೆ. ಇದು ವಿಷಯವಸ್ತುಗಳೆಂಬ ತುಪ್ಪವನ್ನು, ಮಾನವನ ಬಯಕೆಗಳೆಂಬ ಅಗ್ನಿಗೆ ಆಹುತಿ ನೀಡಿದರೆ ಇನ್ನೂ ಪ್ರಖರವಾಗುವ ಅತೃಪ್ತಿಯೆಂಬ ಜ್ವಾಲೆಯಂತೆಯೇ ಸರಿ!

3. ಬಂಧಕತ್ವಮ್ - ತನ್ನ ಇಚ್ಛೆಯ ವಿಷಯವಸ್ತು ಪ್ರಾಪ್ತಿಯಾದ ನಂತರ, ಮಾನವನು ಅದರೊಡನೆ ಮಮಕಾರವನ್ನು ಹೊಂದಿ, ಅದಕ್ಕೆ ಅವಲಂಬಿತನಾಗುತ್ತಾನೆ (dependency). ಇದು ಅವನ ಚಟವಾಗಿಯೂ ಬದಲಾಗಬಹುದು. ಅಲ್ಲದೆ ಅವನ ಮನಸ್ಸನ್ನು ತಲ್ಲಣಗೊಳಿಸಲು, ಪ್ರಾಪ್ತಿಯಾದ ವಿಷಯವಸ್ತುವನ್ನು ಕಳೆದುಕೊಳ್ಳುವ ಅಥವಾ ದೂರಮಾಡುವ ಯೋಚನೆಯಷ್ಟೇ ಸಾಕು!  ಹೀಗಾಗಿ ಮಾನವನು  ತನ್ನ ಸ್ವಾಧೀನತೆಯನ್ನು ಕಳೆದುಕೊಳ್ಳುವಂತೆ ಮಾಡಿ ಬದ್ಧನನ್ನಾಗಿಸುವ, ಈ ವಿಷಯಸುಖಗಳು ಬಂಧಕವಲ್ಲದೆ ಮತ್ತೇನು ?!

 ಅರ್ಥ,ಕಾಮ ಹಾಗು ಧರ್ಮ ಪುರುಷಾರ್ಥಗಳಲ್ಲಿ, ಈ ಮೇಲಿನ ಹಲವು ದೋಷಗಳಿದ್ದರೂ, ಜನರು  ಮತ್ತೇಕೆ ಇವುಗಳ ಬೆನ್ನು ಹತ್ತಿ ಹೋಗುತ್ತಾರೆ? ಎಂದು ಪ್ರಶ್ನೆ ಮೂಡಬಹುದು.  ಈ ಪುರುಷಾರ್ಥಗಳ ಪ್ರಾಪ್ತಿಯಿಂದ ಅಪೂರ್ಣನಾದ ತಾನು ಪರಿಪೂರ್ಣನಾಗುತ್ತೇನೆ, ದುಃಖಿಯಾದ ತಾನು ಸುಖಿಯಾಗುತ್ತೇನೆ, ಅಸುರಕ್ಷಿತನಾದ ತಾನು ಸುರಕ್ಷತೆಯಿಂದ ಜೀವನವನ್ನು ನಡೆಸಬಹುದೆಂಬ ತನ್ನ ಭ್ರಾಂತಿಯೇ ಕಾರಣ.  ಈ ಭ್ರಾಂತಿಗೆ ಮೂಲಕಾರಣ ಸತ್ಯಾಸತ್ಯತೆಯ ವಿಚಾರ ಮಾಡದ ಅವಿವೇಕ ಬುದ್ಧಿ.

ಮೋಕ್ಷ ಪುರುಷಾರ್ಥ:
ಮೋಕ್ಷವೆಂದರೆ ಬಿಡುಗಡೆ, ಸ್ವಾತಂತ್ರ್ಯ ಅಥವಾ ಮುಕ್ತಿ. ವ್ಯಕ್ತಿಯು ವಿವೇಕವನ್ನು ಉಪಯೋಗಿಸಿ ತಾನು ಅಪೂರ್ಣ,ದುಃಖಿ, ಬದ್ಧ, ಅಸುರಕ್ಷಿತನೆಂಬ ಭ್ರಾಂತಿಯಿಂದ ಮುಕ್ತನಾಗುವುದು. ತನ್ನ ಸುರಕ್ಷೆ, ಆನಂದ, ಪರಿಪೂರ್ಣತೆ, ಮನಶ್ಯಾಂತಿಯನ್ನು ಬಾಹ್ಯವಸ್ತುಗಳಲ್ಲಿ, ವ್ಯಕ್ತಿಗಳಲ್ಲಿ ಅಥವಾ  ಸಂದರ್ಭಗಳಲ್ಲಿ ಅರಸದೇ, ಅವುಗಳನ್ನು ತನ್ನಲ್ಲಿಯೇ ಕಂಡುಕೊಳ್ಳುವುದು. ತಾನು ಚೈತನ್ಯ ಸ್ವರೂಪಿ, ಪರಿಪೂರ್ಣ ಹಾಗು ಪರಮಾನಂದ ಸ್ವರೂಪಿ  ಎಂಬ ಜ್ಞಾನಪ್ರಾಪ್ತಿಯ ಮೂಲಕ ಆಂತರಿಕ ಸ್ವಾತಂತ್ರ್ಯವನ್ನು ಕಂಡುಕೊಳ್ಳುವುದೇ ಮೋಕ್ಷ (ಆತ್ಮಜ್ಞಾನ). ಆತ್ಮಜ್ಞಾನವನ್ನು ಪಡೆಯುವ ಮಾರ್ಗವೊಂದೇ: ಮೋಕ್ಷಾರ್ಥಿಯು ವೇದಾಂತ ಶಾಸ್ತ್ರವನ್ನು ಗುರುವಿನ ಉಪದೇಶದ ಮೂಲಕ ಶ್ರವಣ ಮಾಡಿ, ತನ್ನಲ್ಲಿ ಮೂಡುವ ಸಂಶಯಗಳನ್ನು ಪರಿಹರಿಸಿಕೊಂಡು, ನಿಶ್ಚಯಜ್ಞಾನದಲ್ಲಿ ನೆಲೆನಿಲ್ಲುವುದು.
 ಈ ಪುರುಷಾರ್ಥ ಪ್ರಾಪ್ತಿಯ ನಂತರ ಜ್ಞಾನಿಗೆ ಇನ್ನಾವುದೇ  ಪುರುಷಾರ್ಥದ ಅವಶ್ಯಕತೆ ಉಳಿಯದೆ, ಅಂತಿಮವಾಗಿ ಜನನ-ಮರಣ ಸಂಸಾರಚಕ್ರದಿಂದ ಮುಕ್ತಿಹೊಂದುವ ಕಾರಣದಿಂದ, ಇದನ್ನು ’ಪರಮ ಪುರುಷಾರ್ಥ' ಎಂದು ಕರೆಯುತ್ತಾರೆ. 

ನಾವೇನು ಮಾಡಬಹುದು?
ಧರ್ಮ-ಅರ್ಥ-ಕಾಮ ಪುರುಷಾರ್ಥಗಳನ್ನು ತೊರೆಯದೇ, ಅವುಗಳ ಸ್ವಾಭಾವಿಕ ದೋಷಗಳನ್ನು ಅರಿತು, ಈ ಪುರುಷಾರ್ಥಗಳನ್ನು ಸಾಧನವಾಗಿ, ಸಂಧರ್ಬೋಚಿತವಾಗಿ, ಹಿತ-ಮಿತ-ಅವಶ್ಯಕತೆಗಳಿಗಾಗಿ ಆರ್ಜಿಸುವುದು  ಮೋಕ್ಷಾರ್ಥಿಯ ಅಥವಾ ವಿವೇಕಿಯ ಲಕ್ಷಣ. ’ಉತ್ತಿಷ್ಠತ ಜಾಗ್ರತ ಪ್ರಾಪ್ಯ ವರಾನ್ನಿಬೋಧತಾ’ ಎಂಬ ಕಠೋಪನಿಷತ್ತಿನ ವಾಕ್ಯಾರ್ಥವನ್ನೇ ಸ್ವಾಮಿ ವಿವೇಕಾನಂದರು ’ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ’ ಎಂದು ಪುನರುಚ್ಚರಿಸಿದ್ದಾರೆ. ಹೀಗಾಗಿ ಮೋಕ್ಷವನ್ನು ನಮ್ಮ ಜೀವನದ ಧ್ಯೇಯೋದ್ದೇಶವಾಗಿಸಿಕೊಂಡು, ಉಚಿತ ಮಾರ್ಗದಲ್ಲಿ ಅರ್ಥಕಾಮಗಳನ್ನು ಸಿದ್ಧಿಸಿಕೊಳ್ಳುತ್ತಾ, ಧರ್ಮಾಚರಣೆಯಲ್ಲಿ ತೊಡಗಿಸಿಕೊಂಡು,  ಪರಮ ಪುರುಷಾರ್ಥವಾದ ಮೋಕ್ಷವನ್ನು ಈ ಜನ್ಮದಲ್ಲಿಯೇ ಪ್ರಾಪ್ತಿಸಿಕೊಳ್ಳೋಣವೇ?




49 comments:

  1. ವಂದನೆಗಳು ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಾ ಇದನ್ನು ನಾನು ಮತ್ತೆ ಓದಲು ಯಾವ ರೀತಿ ಸೇವ್ ಮಾಡಿಕೊಳ್ಳಬಹುದು ತಿಳಿಸುತ್ತೀರಾ

    ReplyDelete
    Replies
    1. ಗಾಯತ್ರಿ9 December 2025 at 13:28

      ನಮಸ್ಕಾರ ಗುರೂಜೀ,
      ಲೇಖನ ಅತ್ಯುತ್ತಮವಾಗಿದೆ, ನಿಮ್ಮ ತರಗತಿಯಲ್ಲಿ ಕೇಳಿಸಿಕೊಂಡಿದ್ದನ್ನು ಈ ರೀತಿ ಓದಿದಾಗ ಚೆನ್ನಾಗಿ ವಿಷಯವು ಮನಸ್ಸ್ಸು-ಬುದ್ಧಿಗೆ ತಿಳಿಯುತ್ತದೆ. ನಮ್ಮೆಲ್ಲರ ಒಳಿತಿಗಾಗಿ, ನಿಮ್ಮ ಪರಿಶ್ರಮಕ್ಕಾಗಿ ನಾವು ಎಷ್ಟೇ ಧನ್ಯವಾದಗಳನ್ನು ಅರ್ಪಿಸಿದರೂ ಅದು ಕಡಿಮೆಯೇ. ಭಗವಂತನು ನಿಮಗೂ ಮತ್ತು ನಿಮ್ಮ ತಂಡದವರಿಗೆಲ್ಲರಿಗೂ ಆ ಭಗವಂತನು ಎಲ್ಲ ರೀತಿಯಲ್ಲೂ ಒಳ್ಳೆಯದನ್ನೇ ಮಾಡಲಿ ಎಂದು ಪ್ರಾರ್ಥಿಸುತ್ತೇನೆ. ಹೃತ್ಪೂರ್ವಕ ಧನ್ಯವಾದಗಳು.

      Delete
    2. ನಮಸ್ಕಾರ, ಲೇಖನ ಓದಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು. ಇಲ್ಲಿರುವ ವಿಷಯನ್ನು copy ಮಾಡಿ ನಿಮ್ಮ mobile ಅಲ್ಲಿ save ಮಾಡಿಕೊಳ್ಳಿ ಇಲ್ಲವೇ ಇದೇ link ಅಲ್ಲಿ ಮತ್ತೆ ಮತ್ತೆ ಓದಬಹುದು .

      Delete
  2. ಅತ್ಯಂತ ಉತ್ತಮ , ಮಾರ್ಗದರ್ಶನ ದಿಂದ ಕೂಡಿದೆ . ಧರ್ಮ ಅರ್ಥ, ಕಾಮ ಮೋಕ್ಷ ಒಂದೊಂದೇ ಮೆಟ್ಟಲು ಆಗಿ ಮನುಷ್ಯ ತನ್ನ ಉದ್ದಾರ ಹಾದಿಗೇ ಕರ್ಮ ಧರ್ಮೋವು ಶುದ್ಧ ಶ್ರದ್ದೆ ಯೊಂದೇ ಸಾಧನೆ ಗೇ ಗುರಿ ಹಾಗೂ ದುಃಖ ನಿವೃತ್ತಿ ಈ ಭವ ದಿಂದ ವೆಂದು ಭೋದನೆ ಸರಳ ಸುಂದರವಾಗಿ ಹೇಳಿದೆ. ಪೂಜ್ಯ ನಮನಗಳು ಗುರೂಜೀ 🙏🙇‍♀️

    ReplyDelete
  3. ತುಂಬಾ ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ವಿವರಣೆ ನೀಡಿದ್ದೀರಿ ಧನ್ಯವಾದಗಳು 🙏🙏. ಹೀಗೆಯೇ ತಮ್ಮಿಂದ ಇನ್ನೂ ಬೇರೆ ಬೇರೆಯ ಸಂಸ್ಕೃತ ಶ್ಲೋಕ, ಸೂಕ್ತ, ಮಂತ್ರಗಳಿಗೆ ಅರ್ಥ ತಿಳಿಯಲು ಕಾತರದಿಂದ ಕಾಯುತ್ತಿದ್ದೇವೆ. ದಯವಿಟ್ಟು ಮುಂದುವರೆಸಬೇಕಾಗಿ ಕೋರುತ್ತೇನೆ 🙏🙏

    ReplyDelete
  4. ವಿಷಯವನ್ನು ಬಹಳ ಅರ್ಥಪೂರ್ಣವಾಗಿ ತಿಳಿಸಿದ್ದಾರೆ.ಇದನ್ನು ಇನ್ನೂ ನಾಲ್ಕು ಐದು ಬಾರಿ ಅಭ್ಯಾಸ ಮಾಡಿದರೆ ಬಹಳ ಚೆನ್ನಾಗಿರುತ್ತದೆ.

    ReplyDelete
  5. ವಿಕ್ರಮ್ ಶ್ರೀಧರ್9 December 2025 at 13:12

    ಮೋಕ್ಷವೇ ನಿಜವಾದ ಪರಮಪುರುಷಾರ್ಥ —
    ಆದರೆ ಅದಕ್ಕಾಗಿ ಧರ್ಮ, ಅರ್ಥ, ಕಾಮಗಳನ್ನು ತ್ಯಜಿಸುವ ಅಗತ್ಯವೇ ಇಲ್ಲ;
    ಅವುಗಳನ್ನು ಸಾಧನಗಳಾಗಿ, ಮಟ್ಟಗಳಾಗಿ, ಆಂತರಿಕ ಬೆಳವಣಿಗೆಗೆ ಅನುಕೂಲಕರವಾಗುವ ಹೊಣೆಗಾರಿಕೆಗಳಾಗಿ ತಿಳಿಯಬೇಕು.

    ಈ ಮೂರರ ಮಿತಿಯನ್ನು ಅರಿತು,
    ಜ್ಞಾನ, ಭಕ್ತಿ, ಮತ್ತು ವೈರಾಗ್ಯಗಳನ್ನು ಕ್ರಮೇಣ ವೃದ್ಧಿ ಮಾಡಿಕೊಂಡಾಗ
    ಮನಸ್ಸು ಒಳಗಿಂದಲೇ ಶುದ್ಧವಾಗುತ್ತದೆ.
    ಅದೇ ವೇಳೆ, ಮಾನವನನ್ನು ಒಳಗಿನಿಂದ ಕುಗ್ಗಿಸುವ
    ಅರಿಷಡ್ವರ್ಗಗಳು — ಕಾಮ, ಕ್ರೋಧ, ಲೋಭ, ಮೋಹ, ಮದ, ಮಾಥ್ಸರ್ಯ —
    ನಶಿಸತೊಡಗುತ್ತವೆ.

    ಇವುಗಳ ಶಮನದ ಮೂಲಕ
    ಮನುಷ್ಯನ ಮನಸ್ಸಿನಲ್ಲಿ ತೀವ್ರವಾದ ವಿವೇಕ, ವಿಚಾರಶಕ್ತಿ,
    ಮತ್ತೆ ಆಧ್ಯಾತ್ಮಿಕ ಅಭಿವೃದ್ಧಿಗೆ ಅಗತ್ಯವಾದ ಔನ್ನತ್ಯ ಬೆಳೆಯುತ್ತದೆ.

    ಅದರಿಂದಲೇ ಆತ್ಮಸಾಕ್ಷಾತ್ಕಾರಕ್ಕೆ ದಾರಿಯೂ ತೆರೆಯುತ್ತದೆ;
    ಮೋಕ್ಷೋಪಾಯಗಳಿಗೆ ಅಗತ್ಯವಾದ ಸಂಸ್ಕಾರಗಳು ಸ್ಥಿರವಾಗಿ ನೆಲೆಯಾಗುತ್ತವೆ.

    ReplyDelete
    Replies
    1. ನಮಸ್ಕಾರ. ಲೇಖನ ಓದಿ ವಿವರವಾದ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು🙏. ನಿಮ್ಮ ವೇದಾಂತ ಅಧ್ಯಯನದ ಆಸಕ್ತಿ ಹಾಗು ನಮ್ಮ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಹೀಗೆಯೇ ಮುಂದುವರೆಯಲಿ.

      Delete
  6. 🙏🙏🙏(ವಿಷಯವನ್ನು ಬಹಳ ಅರ್ಥಪೂರ್ಣವಾಗಿ ತಿಳಿಸಿದ್ದೀರಿ! ಇದನ್ನು ಮೇಲಿಂದ ಮೇಲೆ ಮೆಲಕು ಹಾಕುವುದು ಒಳ್ಳಯದು, ತಮಗೆ ನಮ್ಮಿಂದ ಅನಂತ -ಅನಂತ ಧನ್ಯವಾದಗಳು. 🙏🙏🙏🙏)

    ReplyDelete
  7. ನಮಸ್ಕಾರ ಗಳು ಪೂಜ್ಯರಿಗೆ
    ಸಾಮಾನ್ಯರಿಗೂ ಅರ್ಥವಾಗವಂತೆವಿಷಯಗಳನ್ನು ಬಹಳ
    ಅರ್ಥಪೂರ್ಣವಾಗಿ ತಿಳಿಸಿದ್ದೀರ.ಧನ್ಯವಾದಗಳು.

    ReplyDelete
  8. ನಮಸ್ತೆ ಗುರುಗಳೆ,
    ಬಹಳ ಸಂಕ್ಷಿಪ್ತವಾಗಿ ಮೋಕ್ಷದ ಜೀವನ ಅಂದರೆ ಆನಂದವಾಗಿ ಹೇಗೆ ಜೀವನ ಮಾಡಬಹುದು ಎಂದು ಮೋಕ್ಷ ಪುರುಷಾರ್ಥದ ವಿವರಣೆ ಕೊಟ್ಟಿದ್ದೀರ.ಧನ್ಯವಾದಗಳು🙏🙏

    ReplyDelete
  9. ವಿವರಣೆ ತುಂಬ ಚೆನ್ನಾಗಿದೆ , ಧನ್ಯವಾದಗಳು 🙏

    ReplyDelete
  10. Nice. Please send these types of Articles at regular intervals.

    ReplyDelete
    Replies
    1. Thanks for your reply. Kindly do follow this blog for regular articles and updates

      Delete
  11. Hari om.
    This program is need of the hour.
    My heartfelt pranaam
    Hari om

    ReplyDelete
  12. ಇಲ್ಲಿಯ ವರೆಗೂ ಪುರುಷಾರ್ಥಗಳಲ್ಲಿ ಧರ್ಮ ಅರ್ಥ ಕಾಮ ಮೋಕ್ಷ ಕ್ರಮದಲ್ಲಿ ಕೇಳಿದ್ದೆ ತಾವು ಅರ್ಥ ದಿಂದ ಪ್ರಾರಂಭಿಸಿದ್ದೀರಿ ಹಾಗೂ ಉಪನಿಷತ್ತಿನ ಶ್ಲೋಕ ದಲ್ಲಿ ಧರ್ಮೋಹಿ ತೇಷಾಂ ಅಧಿಕೋ ವಿಶೇಷ ಎಂದು ಕೇಳಿದ್ದೆ ಯಾವುದು ಸರಿ ದಯವಿಟ್ಟು ತಿಳಿಸಿ. 🙏

    ReplyDelete
    Replies
    1. ನಮಸ್ಕಾರ 🙏. ಲೇಖನ ಓದಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು. ನಿಮ್ಮ ಪ್ರಶ್ನೆಗಳಿಗೆ ಉತ್ತರ ಹೀಗಿದೆ :
      ೧. "ಧರ್ಮೋಹಿ ತೇಷಾಂ ಅಧಿಕೋ ವಿಶೇಷ.." ಹಾಗು "ಬುದ್ಧಿರ್ಹಿ ತೇಷಾಮಧಿಕೋ.." ಎಂಬ ಎರಡು ರೀತಿಯ ಪಾಠಾಂತರಗಳು ಇವೆ.
      ೨. ನೀವು ತಿಳಿಸಿದಂತೆ ಧರ್ಮವೇ ಮೊದಲು ಆಗಬೇಕು ಅನ್ನುವುದು ಆಶಯ. ಆದರೆ ಮಾನವನ ಸಹಜವಾದ ಪ್ರವೃತ್ತಿ ಮೊದಲು ಅರ್ಥ-ಕಾಮಗಳ ಗಳಿಕೆಯಾಗಿದ್ದು ನಂತರ ಧರ್ಮಾಚರಣೆಯ ಕಡೆ ಮನಸ್ಸು ಮಾಡುವುದರಿಂದ ಈ ಕ್ರಮವನ್ನು ಉಪಯೋಗಿಸಲಾಗಿದೆ .

      Delete
  13. ಬಹಳ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ ಅರ್ಥಪೂರ್ಣವಾಗಿದೆ

    ReplyDelete
  14. Really good, lot to b understood , thanks n pranaam.

    ReplyDelete
  15. ಗಹನವಾದ ವಿಚಾರಕ್ಕೆ ಸರಳವಾದ ಅಡಿಪಾಯ ಹಾಕಿ ವಿವರಿಸಿದ ಆಚಾರ್ಯರಿಗೆ ನನ್ನ ಶಿರಃ ಸಾಷ್ಟಾಂಗ ಪ್ರಣಾಮಗಳು.

    ReplyDelete
  16. ಯಸ್ಸು

    ReplyDelete
  17. ಅದ್ಭುತವಾಗಿದೆ ಹಾಗು ಕಲಿಕೆಗೆ ಸೂಕ್ತವಾಗಿದೆ. ಧನ್ಯವಾದಗಳು 🙏

    ReplyDelete
  18. ಬಹಳ ಉಪಯುಕ್ತ...ಗುರುಗಳೆ, ವಂದನೆಗಳು

    ReplyDelete
  19. ಸಾಮಾನ್ಯ ಮಾನವರಿಗೆ, ಅಸಾಧ್ಗವಾದ, ಗಹನವಾದ ಮೋಕ್ಷ ಪುರುಷಾರ್ಥದ ಮಾರ್ಗವನ್ನು ಹೊಂದಲು, ಸುಲಭ
    ಸಾಧ್ಯದ ಹಾದಿಯನ್ನು , ಸರಳೀಕೃತ ಸುಂದರ ದಾರಿದೀಪದ
    ಬೆಳಕು ಚೆಲ್ಲಿ, ಆತ್ಮೋನ್ನತಿಗೆ ಕಾರಣರಾದ ಗುರುವೃಂದಕ್ಕೆ
    ಶಿರಸಾ ಪ್ರಣಾಮಗಳು,,

    ReplyDelete
  20. ಅದ್ಭುತವಾಗಿದೆ ಗುರುಗಳೇ, ತುಂಬು ಹೃದಯದ ಧನ್ಯವಾದಗಳು

    ReplyDelete
  21. ಅಧ್ಯಾತ್ಮದ ಹಸಿವಿಗೆ ಒಳ್ಳೆಯ ಊಟ ಬಡಿಸಿದ್ದೀರಿ
    ಧನ್ಯವಾದಗಳು 🙏

    ReplyDelete
  22. 🙏🏼 ಗುರೂಜಿ
    ತಮ್ಮ ಲೇಖನ ಅದ್ಭುತವಾಗಿದೆ. ನಾಲ್ಕು ಆಶ್ರಮಗಳಲ್ಲಿ
    ಬ್ರಹ್ಮಚರ್ಯಾಶ್ರಮದಲ್ಲಿ ಸಾಧಿಸಿದ ವೇದ ಶಾಸ್ತ್ರ, ವಾಣಿಜ್ಯ ಕಲೆ,ವಿಜ್ಞಾನಾದಿ ವಿದ್ಯೆ ಗಳು ಪುರುಷರ್ಥ ದ ಮೊದಲನೆಯದಾದ ಧರ್ಮಕ್ಕೆ (ಕರ್ತವ್ಯ ) ತಳಹದಿಯಾಗುವುದು. ಧರ್ಮದಿಂದ ಅರ್ಥಕ್ಕೆ (ಸಂಪಾದನೆ)
    ತಳಹದಿಯಾಗುವುದು. ಅರ್ಥದಿಂದ ಕಾಮ ಇಷ್ಟಾರ್ಥ ಸಾಧನೆ ಯಾಗುವುದು. ಇವು ಮೂರೂ ಲೌಕಿಕ ಬದುಕಿಗೆ ಅವಶ್ಯವಾದುವುಗಳು. ಕೊನೆಯದಾದ ಮೋಕ್ಷ ಸಾಧನೆಗೆ ಬೇಕಾಗಿರುವುದು ಆತ್ಮಜ್ಞಾನ ಅಧ್ಯಾತ್ಮ ವಿದ್ಯೆ. ಅಂದರೆ ಭಕ್ತಿ,,ಜ್ಞಾನ, ಕರ್ಮ ಗಳನ್ನು ಯೋಗವಾಗಿಸುವ ಪರಾ ವಿದ್ಯೆ
    ನಿಜವಾದ ವಿದ್ಯೆ ಇವುಗಳನ್ನು ನಿತ್ಯಜೀವನದಲ್ಲಿ ಅಳವಡಿಸಿ
    ಆತ್ಮಸಾಕ್ಷಾತ್ಕಾರ ಹೊಂದಬಹುದು. ಜನನ ಮರಣ ಚಕ್ರದಿಂದ ಪಾರಾಗಬಹುದು.
    ಪರಾವಿದ್ಯೆ ಜ್ಞಾನವನ್ನು ನೀಡಿ ಮೋಕ್ಷರ್ಥಿಗಳ ಆತ್ಮ ಉದ್ಧರಿ ಸುವ ತಮ್ಮ ಕಾರ್ಯ ಶ್ಲಾಘನೀಯ ಹಾಗೂ ಅಭಿನಂದನೀಯ.
    ಧನ್ಯವಾದಗಳು 🙏🙏🙏

    ReplyDelete
  23. ಕ್ಲಿಷ್ಟಕರ ವಿಚಾರಕ್ಕೆ ಸರಳವಾದ ಅಡಿಪಾಯ ಹಾಕಿ ನಮಗೆ ಆತ್ಮ ಜ್ಞಾನದ ಪರಿಚಯ ಮಾಡಿಸುತ್ತಿರುವ ಆಚಾರ್ಯರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು.

    ReplyDelete
  24. Thumba chennagidhe.olleya vichara.

    ReplyDelete
  25. Thumba olleye vichara.yidhannu chennagi manana madi alavadisi kolluvudhu namma prayathna nadibeku.gurugala ashirvadha yirali

    ReplyDelete
  26. ಮೋಕ್ಷವೇ ಜೀವನದ ಶ್ರೇಷ್ಠ ಗುರಿ.
    ಆದರೆ ಧರ್ಮ–ಅರ್ಥ–ಕಾಮಗಳನ್ನ ತ್ಯಜಿಸಲು ಅಲ್ಲ,
    ಅವನ್ನು ಮನಸ್ಸನ್ನು ಬೆಳೆಸುವ ಹೆಜ್ಜೆಗಳಾಗಿ ಬಳಸಬೇಕಷ್ಟೆ.
    ಈ ಪುರಷಾರ್ಥಗಳ ಮಿತಿಯನ್ನು ಅರಿಯುವಾಗ
    ಜ್ಞಾನ, ಭಕ್ತಿ, ವೈರಾಗ್ಯ ಸ್ವಾಭಾವಿಕವಾಗಿ ಹೃದಯದಲ್ಲಿ ಅರಳುತ್ತವೆ.
    ಈ ಅಂತರ್ಯಾತ್ರೆಯಲ್ಲೇ ಕಾಮ–ಕ್ರೋಧ–ಲೋಭ–ಮೋಹ–ಮದ–ಮಾತ್ಸರ್ಯ ನಿಧಾನವಾಗಿ ಕರಗುತ್ತವೆ. ಅವು ಕರಗಿದಷ್ಟೂ ವಿವೇಕ, ಸ್ಪಷ್ಟತೆ, ಆಧ್ಯಾತ್ಮಿಕ ಭಾವುಕತೆ ಒಳಗೆ ಬೆಳೆಯುತ್ತವೆ. ಅಂತಹ ಶುದ್ಧ ಹೃದಯದಲ್ಲೇ ಆತ್ಮಸಾಕ್ಷಾತ್ಕಾರಕ್ಕೆ ದಾರಿ ತೆರೆಯುತ್ತದೆ ಮತ್ತು ಮೋಕ್ಷ ಸಾಧಿಸಲು ಬೇಕಾದ ಸಂಸ್ಕಾರಗಳು ಪಾಕವಾಗುತ್ತವೆ.

    ReplyDelete
  27. 🙇🙇 ಗುರುಗಳೇ
    ಲೇಖನವು ಅದ್ಭುತವಾಗಿದೆ, ಮೋಕ್ಷದ ಮಾರ್ಗವನ್ನು ಪಡೆಯಲು ಹೇಗೆ ಜ್ಞಾನ,ಭಕ್ತಿ ,ವೈರಾಗ್ಯಗಳನ್ನು ವೃದ್ಧಿ ಮಾಡಿಕೊಂಡ ಅರಿಷಡ್ವರ್ಗವನ್ನು ಜಯಿಸಿ ನಮ್ಮ ಮನಸನ್ನು ಭಗವಂತನಲ್ಲಿ ಹೇಗೆ ಸಾಕ್ಷಾತ್ ಕರೆಸಿಕೊಳ್ಳುವುದು ಎಂಬುದನ್ನು ಸವಿವರವಾಗಿ ತಿಳಿಸಿ ನಮ್ಮನ್ನು ಜ್ಞಾನದ ಮಾರ್ಗಕ್ಕೆ ಕರೆದುಕೊಂಡ ಹೋಗುತ್ತಿರುವ ನಿಮಗೆ ಅನಂತ ಧನ್ಯವಾದಗಳು ಗುರುಗಳೇ 🙏 🙏.

    ReplyDelete
  28. Thank you very much 🙏🙏🙏

    ReplyDelete
  29. Thank you sir when is next class at what time please let me know Class was wonderful can't say in words just like to hear and try to follow in life I don't want to miss any class

    ReplyDelete
    Replies
    1. Thank you very much for your feedback 🙏. Keep following our whatapp groups or Upcoming Events lonk in this blog for updates about future courses

      Delete
  30. Sir i am instrested to join veda chanting class 🙏

    ReplyDelete
  31. The article is comprehensive and covers the most important and fundamental topic.. Relevant for all..

    ReplyDelete
  32. ಮುಂದಿನ ಭಾಗ (10.12.25) ಸಿಗುತ್ತಿಲ್ಲ

    ReplyDelete
  33. ಸದ್ಗುರುಗಳಿಗೆ ವಂದಿಸುತ್ತಾ ಜೀವನ ಸಾರ್ಥಕತೆಯ ಬಗ್ಗೆ ಅರಿವು ಮೂಡಿಸುವ ಲೇಖನ ಅತ್ಯುತ್ತಮ ಬೋಧಪ್ರದವಾಗಿ ವಿಶ್ಲೇಷಣಾತ್ಮಕ ವಿವರಣೆಯೊಂದಿಗೆ ಸೊಗಸಾಗಿ ಮೂಡಿಬಂದಿದೆ.
    ಹೃತ್ಪೂರ್ವಕ ಪ್ರಣಾಮಗಳು

    ReplyDelete
  34. Iam highly interested in spritual concepts.I need a perfect guru so that I will surrender and do spritual practice

    ReplyDelete
  35. ನಮಸ್ಕಾರ 🙏
    ಮೊದಲು , ಆನಂದದ ಜೊತೆಗೆ ದುಃಖ.
    ಒಳ್ಳೆಯ ಉದಾಹರಣೆ. ಗುಲಾಬಿ ಹೂ ಮತ್ತು ಮುಳ್ಳು.
    ವಿಷಯ ವಸ್ತು (ತುಪ್ಪ) .
    ಬಯಕೆಗಳು ಎಂಬ ಅಗ್ನಿ ಗೆ ಆಹುತಿ. ಅದರ ಪರಿಣಾಮ. 👌.
    ನಂತರ ಸತ್ಸಂಗ ವೂ ಒಂದು ಬೃಹತ್ ಆಸೆ.
    ಇದೂ ಬಂಧನ ಅಲ್ಲ.
    ಹೇಗೆ?
    ಸತ್ಯ ತಿಳಿಯಲು ಬುದ್ಧಿ ಇಲ್ಲ .ಅಜ್ಞಾನ.
    ಅವನಿಗೆ ಮೇಲಿಂದ ಮೇಲೆ ಜೀವನದಲ್ಲಿ ಬೀಳುವ
    ಹೊಡೆತಗಳ ಪರಿಣಾಮ ನಿವೃತ್ತಿ ಮಾರ್ಗಕ್ಕೆ ತಿರುಗುವನು.
    ಇದು ನನ್ನ ಅಭಿಪ್ರಾಯ.
    ಅಜ್ಞಾನ ಹೋಗಲಾಡಿಸಲು ,
    ನೀವು ಕೈ ಗೊಂಡಿರು ವ ನಿಸ್ವಾರ್ಥ ಸೇವೆಗೆ ನಮಸ್ಕಾರ.
    ನಿಮ್ಮ ಸಹ ಜತೆಗಾರರಿಗೂ ನಮಸ್ಕಾರಗಳು.
    ಧನ್ಯವಾದಗಳು.

    ReplyDelete
  36. Namaste Guruji. The article is very relevant at this point of time . Human birth is very great n
    meaningful. Humans only can evolve because of his intellectual capacity . All these things are wonderfully explained with clarity .
    The purpose of human birth is to attain moksha other than artha, kama, dharma.
    We can only get dukhamishritatvam , atruptikaram, bandhakatvam. This has been intelligently explained . It is very commendable.
    Expecting more n more articles.
    ಸರಿಯಾದ ಸಮಯದಲ್ಲಿ ಎಚ್ಚರಿಸಿರುವಿರೀ. ಧನ್ಯವಾದಗಳು. ಶ್ರವಣ, ಮನನಗಳು ನಡೆಯುತ್ತಿದೆ. ಅನುಸಂಧಾನಕ್ಕೆ ಇನ್ನೂ ಹೆಚ್ಚಿನ ಪ್ರಯತ್ನ ಬೇಕಾಗಿದೆ. ನಿರಂತರ ಮನನದ ಅವಶ್ಯಕತೆಯನ್ನು ಬಡಿದು ಎಬ್ಬಿಸಿರುವ ನಿಮ್ಮ ಪ್ರಯತ್ನ ಶ್ಲಾಘನೀಯ.
    ಭಕ್ತಿ ಪೂರ್ವಕ ನಮಸ್ಕಾರಗಳು

    ReplyDelete
  37. A clear analysis of PURUSHARTHAS.

    ReplyDelete
  38. ಚೆನ್ನಾಗಿದೆ ಧನ್ಯವಾದಗಳು. ಪುರುಷ ಎಂದರೆ ಗಂಡು ಎನ್ನುವ ಅರ್ಥದಲ್ಲಿ ಹಲವು ಅಪಾರ್ಥಗಳಾಗಿವೆ. ಆತ್ಮಕ್ಕೆ ಲಿಂಗ ಬೇಧವಿಲ್ಲ ಇಂದಿಗೂ ಪರಮಾತ್ಮನ ಸೇರೋ ಜೀವಾತ್ಮನಿಗೆ ಧರ್ಮ ಅರ್ಥ ಕಾಮ‌ಮೋಕ್ಷದ ಅರಿವಿನ ಅಗತ್ಯವಿದೆ. ಮೋಹದ ಕ್ಷಯವೇ‌ಮೋಕ್ಷ ಎಂದರೆ ಸರಿಯಾಗಬಹುದು. ಇದು ಯೋಗದಿಂದ ಮಾತ್ರ ಸಾಧ್ಯವೆಂದಿರುವರು ಯೋಗಿಗಳಾದವರು.ಇದರಲ್ಲಿ ಜ್ಞಾನಯೋಗ,ರಾಜಯೋಗ,ಭಕ್ತಿಯೋಗ,ಕರ್ಮಯೋಗ ಎಲ್ಲವೂ ಶ್ರೇಷ್ಟವಾಗಿದೆ.

    ReplyDelete
  39. 'ಧರ್ಮ ಅರ್ಥ ಕಾಮ ಮೋಕ್ಷ', ಈ ಅನುಸರಣಿಕೆ
    (order) ಬಹುಶಃ ಮನುಷ್ಯನ 'ಅರ್ಥ ಕಾಮಗಳು'
    "ಧರ್ಮ ಮತ್ತು ಮೋಕ್ಷದ" ಪರಿಧಿಯೊಳಗೆ ಎಂದರೆ ಚೌಕಟ್ಟಿನೊಳಗೆ ಇರಬೇಕು
    ಎನ್ನುವುದನ್ನು ಧ್ವನಿಸುತ್ತದೆ ಎಂದು ಕಾಣುತ್ತದೆ

    ReplyDelete
  40. ಅದ್ಭುತವಾದ ಅಧ್ಯಯನದ ಮೂಲಕ ತಮ್ಮ ಸಾಮರ್ಥ್ಯ ಬಲದಿಂದ ಈ ಲೇಖನ ಬರೆಯುವ ಮುನ್ನ ಪ್ರಯೋಜನ, ಪ್ರಮಾಣ ಬದ್ದ ಬುದ್ದಿ ಬಲದಿಂದ ನೀವು ಎಲ್ಲ ರೀತಿಯ ತಿಳಿವಳಿಕೆಯಿಂದ ಮನು ಕುಲದ ಉದ್ದಾರಕ್ಕಾಗಿ ಶ್ರಮದಿಂದ ಆಮೋಘ ವಾಗಿ ತಿಳಿಸಿ ಉಪಾಯ ಸತ್ ಚಿಂತನೆಯಲಿ ತನ್ನ ನ್ನು ತಾನು ಮೋಕ್ಷ ಪದವಿ ದಾರಿ ದೀಪವಾಗಿರುವಿರಿ ತಮಗೆ ದನ್ಯವಾದದ ನಮಸ್ಕಾರ 🙏🙏🌹🌹

    ReplyDelete